ಮಂಡ್ಯ :- ಆರೋಗ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿ ಮಾಡದೆ ವಿಳಂಬ ಮಾಡುತ್ತಿರುವ ಗುತ್ತಿಗೆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಮಾಡಬೇಕು ಹಾಗೂ ತುರ್ತಾಗಿ ಬಾಕಿ ವೇತನ ಪಾವತಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ವಿವಿಧ ವೃಂದದ ಹೊರಗುತ್ತಿಗೆ ನೌಕರರ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ನಗರದಲ್ಲಿ ಜಿಲ್ಲಾಧಿಕಾರಿ ಡಾ. ಕುಮಾರರಿಗೆ ಮನವಿ ಸಲ್ಲಿಸಿ ಆರೋಗ್ಯ ಇಲಾಖೆಗೆ ಹೊರಗುತ್ತಿಗೆ ನೌಕರರನ್ನು ಸರಬರಾಜು ಮಾಡಲು ಟೆಂಡರ್ ಪಡೆದಿರುವ ಮೈಸೂರಿನ ಪನ್ನಗ ಎಂಟರ್ ಪ್ರೈಸಸ್ ಖಾಸಗಿ ಸಂಸ್ಥೆಯು ಕಳೆದ ಐದಾರು ತಿಂಗಳುಗಳಿಂದ ಹೊರ ಗುತ್ತಿಗೆ ನೌಕರರಿಗೆ ವೇತನ ಪಾವತಿ ಮಾಡದೆ ವಂಚಿಸುತ್ತಿದೆ, ಈ ಬಗ್ಗೆ ವಿಚಾರಿಸಿದರೆ ಮುಂದುವರೆದ ಆದೇಶ ನೀಡಿಲ್ಲ ಎಂಬ ಸಬೂಬ ಹೇಳುತ್ತಿದೆ.
ವೇತನದ ಮೇಲೆ ಅವಲಂಬಿತವಾಗಿರುವ ನೌಕರರ ಕುಟುಂಬಗಳು ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಿ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕು, ಸದರಿ ಖಾಸಗಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಬಾಕಿ ಇರುವ ವೇತನವನ್ನು ತುರ್ತಾಗಿ ಪಾವತಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಸಂಘದ ರಾಜ್ಯಾಧ್ಯಕ್ಷ ಅಕ್ಷಯ್ ಡಿ ಎನ್ ಗೌಡ ಇತರರಿದ್ದರು.