ಮಂಡ್ಯ :- ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ನಮ್ಮ ಜಿಲ್ಲೆಯ ಕೆ. ಎಸ್ ನರಸಿಂಹಸ್ವಾಮಿ ಅವರು ಒಬ್ಬರು ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳಬೇಕಾಗಿದೆ ಆ ನಿಟ್ಟಿನಲ್ಲಿ ಕೆ. ಎಸ್ ನರಸಿಂಹಸ್ವಾಮಿ ಅವರ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು.
ಕೆ.ಎಸ್ ನರಸಿಂಹಸ್ವಾಮಿ ಸ್ಮಾರಕ ನಿರ್ಮಾಣ ಮಾಡುವ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕೆ. ಎಸ್ ನರಸಿಂಹಸ್ವಾಮಿ ಅವರ ಸ್ಮಾರಕ ನಿರ್ಮಾಣದ ಕುರಿತು ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಸಭೆಯನ್ನು ಆಯೋಜಿಸಿ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸುವಂತೆ ಈಗಾಗಲೇ ಸಚಿವರಾದ ಚೆಲುವರಾಯಸ್ವಾಮಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಪ್ರಸ್ತುತ ಕೆ. ಎಸ್ ನರಸಿಂಹಸ್ವಾಮಿ ರವರ ಮನೆಯು ಮಾರಾಟವಾಗಿದೆ, ಮನೆಯ ಮಾಲೀಕರು ಮನೆಯನ್ನು ಬಿಟ್ಟುಕೊಡಲು ತಯಾರಾಗಿದ್ದು ಮನೆಯ ಮಾಲೀಕರಿಗೆ ಪರ್ಯಾಯ ಸರ್ಕಾರಿ ಜಾಗ ನೀಡಿ ಕೆ.ಎಸ್. ನರಸಿಂಹಸ್ವಾಮಿ ಅವರ ಮನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿಗೆ ಮಾಡಲಾಗುವುದು ಎಂದು ಹೇಳಿದರು.
ಕೆ. ಎಸ್ ನರಸಿಂಹಸ್ವಾಮಿ ಅವರ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸಿ, ಅವರಿಗೆ ಸಂಬಂಧ ಪಟ್ಟ ಎಲ್ಲಾ ವಸ್ತುಗಳನ್ನು ಅಲ್ಲಿ ಶೇಖರಿಸಿ ಇಡಲಾಗುವುದು, ಕೆ. ಎಸ್ ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ಸ್ಮಾರಕ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಕೆ . ಎಸ್. ನರಸಿಂಹಸ್ವಾಮಿ ಅವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಗುವುದು, ಮೇಲುಕೋಟೆ ಸಮೀಪದಲ್ಲಿ ಇರುವ ಸೂಕ್ತ ಸರ್ಕಾರಿ ಜಾಗ ಗುರುತಿಸಿ ಅಲ್ಲಿ ಕೆ.ಎಸ್. ನರಸಿಂಹಸ್ವಾಮಿ ರವರ ಹೆಸರಿನಲ್ಲಿ ಬಯಲು ರಂಗಮಂದಿರ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಕಿಕ್ಕೇರಿ ಕೆರೆಯನ್ನು ಕೆ. ಎಸ್. ನರಸಿಂಹಸ್ವಾಮಿ ಸರೋವರವೆಂದು ಮರುನಾಮಕರಣ ಮಾಡಿ, ಕೆರೆಯಲ್ಲಿ ವಾಕಿಂಗ್ ಪಾರ್ಕ್, ದೀಪ ವ್ಯವಸ್ಥೆ ಹಾಗೂ ಮುಂತಾದ ಕ್ರಮಗಳ ಕುರಿತು ಡಿ.ಪಿ.ಆರ್ ಸಿದ್ಧಪಡಿಸಿ ನೀರಾವರಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಹೇಳಿದರು.
ಕೆ. ಎಸ್. ನರಸಿಂಹಸ್ವಾಮಿ ಅವರ ಸ್ಮಾರಕಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ಇರುವ ಅನುದಾನ ಉಪಯೋಗಿಸಿಕೊಂಡು ಸ್ವಾಗತ ಕಮಾನು ನಿರ್ಮಾಣ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರುಇಷ್ಟೆಲ್ಲಾ ಕಾರ್ಯಾಗಳನ್ನು ಅಧಿಕಾರಿಗಳು ಶ್ರೀಘ್ರವಾಗಿ ಮಾಡಿ ಮುಗಿಸಬೇಕು, ಇಲ್ಲವಾದಲ್ಲಿ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಡಿ.ವಿ ನಂದೀಶ್, ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ನ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ, ಕಾವೇರಿ ನಿರಾವರಿ ನಿಮಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಎಂ. ಮಂಜುನಾಥ್, ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ನ್ ಸದಸ್ಯರುಗಳಾದ ತಿಮ್ಮರಾಜು, ಶ್ರೀನಿವಾಸ್, ಡಾ. ಮೇಖಲಾ ವೆಂಕಟೇಶ್ ಉಪಸ್ಥಿತರಿದ್ದರು.