ಮಂಡ್ಯ : ಭಾರತ ದೇಶದಲ್ಲಿ ಪ್ರತಿಯೊಬ್ಬ ಜನತೆಗೆ ಇರುವ ಏಕೈಕ ಗ್ರಂಥ ಎಂದರೆ ಸಂವಿಧಾನ.ಇಂತಹ ಸಮಾನತೆಯ ಮಾನವೀಯ ಗ್ರಂಥದಿಂದ ಸಮಾನತೆಯ ಸಾರ್ಥಕತೆ ಕಂಡುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಹೇಳಿದರು.
ತಾಲೂಕಿನ ಕೆರಗೋಡು ಗ್ರಾಮದ 1 ನೇ ಬ್ಲಾಕ್ ನಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ 134 ನೇ ಜಯಂತೋತ್ಸವದ ಅಂಗವಾಗಿ ಏರ್ಪಡಿಸಿದ್ದ ಭೀಮೋತ್ಸವದಲ್ಲಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತಕ್ಕೆ ನಾಯಕರಲ್ಲ ಇಡೀ ವಿಶ್ವ ನಾಯಕರಾಗಿರುವ ಮಹಾ ಮಾನವತವಾದಿ ಪ್ರಪಂಚದ 70ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ.ಪ್ರತಿಮೆಗಳು ಇವೆ ಎಂದರೆ ಅವರ ಚಿಂತನೆ,ಸಾಧನೆ, ಕೊಡುಗೆಗಳು ಯಾವ ಮಟ್ಟದಲ್ಲಿವೆ ಎಂಬುವುದರ ಬಗ್ಗೆ ಆತ್ಮಾವಲೋಕನ ಮಾಡಬೇಕು ಎಂದು ಹೇಳಿದರು.
ಅಂಬೇಡ್ಕರ್ ಅವರು ಭಾರತ ದೇಶದಲ್ಲಿ ಹುಟ್ಟಲಿಲ್ಲ ಎಂದರೆ ಭಾರತ ದೇಶ ಬಡವಾಗುತ್ತಿತ್ತು. ಇಂತಹ ಭಾರತ ದೇಶದಲ್ಲಿ ಹುಟ್ಟಿರುವ ನಾವು ಭಾಗ್ಯಶಾಲಿಗಳು,ಅಂಬೇಡ್ಕರ್ ಅವರ ಜಯಂತಿ ಒಂದು ದಿನಕ್ಕೆ ಸೀಮಿತ ವಾಗಬಾರದು.ಅವರ ಮೌಲ್ಯಗಳು, ಚಿಂತನೆಗಳು, ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ಮಕ್ಕಳಿಗೂ ತಿಳಿಸಬೇಕು ಎಂದು ಹೇಳಿದರು.
ಸಮಾನತೆಯ ಮಾನವೀಯ ಗ್ರಂಥ ಸಂವಿಧಾನ ವನ್ನು ನಮ್ಮ ಮನೆಗಳಲ್ಲಿ ಹಾಗೂ ಮನಸ್ಸುಗಳಲ್ಲಿ ಪೂಜೆ ಮಾಡಬೇಕು. ಪ್ರತಿಯೊಬ್ಬ ನಾಗರಿಕರು ಸಂವಿಧಾನದಿಂದ ಸಮಾನತೆಯ ಸಾರ್ಥಕತೆ ಕಂಡುಕೊಳ್ಳಬೇಕು ಹಾಗೂ ಸಮ ಸಮಾಜದ ಸಾರ್ಥಕತೆ ಕಂಡುಕೊಳ್ಳಬೇಕು. ಸಮಾನತೆ ಸಾಮಾಜಿಕ ನ್ಯಾಯದಲ್ಲಿ ಸಂವಿಧಾನದ ಆಶಯದಂತೆ ನಾವು ಬದುಕಬೇಕು ಎಂದು ಹೇಳಿದರು.
ಶಾಸಕ ಪಿ.ರವಿಕುಮಾರ್ ಗಣಿಗ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದ ಶ್ರೇಷ್ಠ ಸಂವಿಧಾನವನ್ನು ಕೋಮುವಾದಿ ಗಳು ಬದಲಾಯಿ ಸುವುದಕ್ಕಾಗಿ ಧರ್ಮ ಹಾಗೂ ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೀರ್ ಸಾಧಿಕ್ ಕೆಲಸವನ್ನು ಮಾಡುತ್ತಿದ್ದಾರೆ, ಅಂತವರ ಬಗ್ಗೆ ಸಾರ್ವಜನಿಕರು ಹಾಗೂ ಯುವಕರು ಎಚ್ಚರ ವಹಿಸಬೇಕೆಂದು ತಿಳಿಸಿದರು.
ಸಂವಿಧಾನ ತಿರುಚುವ ಕೆಲಸಕ್ಕೆ ಕೈ ಹಾಕಿರುವ ಕೋಮುವಾದಿಗಳು ಜಾತಿ ಜಾತಿಗಳ ನಡುವೆ ಗಲಭೆಯೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ.ನಮ್ಮಲ್ಲಿ ನಾವೇ ಹೊಡೆದಾಡಿಕೊಳ್ಳುವಂತೆ ಮಾಡುತ್ತಿದ್ದಾರೆ,ಇಂತಹ ಸಮಾಜಘಾತುಕರ ಬಗ್ಗೆ ಎಚ್ಚರವಹಿಸಬೇಕೆಂದು ತಿಳಿಸಿದರು.
ಅಂಬೇಡ್ಕರ್ ಅವರನ್ನು ಅರ್ಥೈಸಿಕೊಂಡು ಯುವ ಜನರು ಇಂದು ಐಎಎಸ್, ಐಪಿಎಸ್ ಹಾಗೂ ಐಆರ್ ಎಸ್ ನಂತರ ಹುದ್ದೆಗಳಿಗೆ ಆಯ್ಕೆಯಾಗುತ್ತಿದ್ದಾರೆ. ಕೊಮ್ಮೇರಹಳ್ಳಿಯ ಯುವಕರೊಬ್ಬರು ಐಆರ್ಎಸ್ ಹುದ್ದೆಗೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ ಎಂದರು.
ಅಂಬೇಡ್ಕರ್ ಅವರು ಎಲ್ಲ ಧರ್ಮಿಯರಿಗೆ ಅನ್ವಯವಾಗುವಂತೆ ಸಂವಿಧಾನ ರಚಿಸಿ ಕೊಟ್ಟಿದ್ದಾರೆ. ಅವರಿಗೆ ಹಿಂದೂ, ಮುಸ್ಲಿಂ, ಸಿಖ್, ಪಾರ್ಸಿ, ಜೈನ್, ಬೌದ್ಧ ಎನ್ನದೇ ಎಲ್ಲ ಧರ್ಮಿಯರು ಗೌರವ ಸಲ್ಲಿಸಬೇಕು, ಅಂಬೇಡ್ಕರ್ ಜಯಂತಿ ಒಂದು ದಿನಕ್ಕೆ ಸೀಮಿತವಾಗ ಬಾರದು,ವರ್ಷದ ಎಲ್ಲ ದಿನವು ಆಚರಣೆಯಾಗಬೆಕೆಂದು ತಿಳಿಸಿದರು. ಕೆರಗೋಡಿನ ಅಂಬೇಡ್ಕರ್ ಭವನದ ಕಾಮಗಾರಿ ಸ್ಥಗಿತವಾಗಿದ್ದು, ಅದರ ಮುಂದವರಿಕೆ ಕಾಮಗಾರಿಗೆ ಒಂದು ವರ್ಷದಲ್ಲಿ ಅಗತ್ಯ ಅನುದಾನ ಒದಗಿಸುತ್ತೇವೆ.ಅಲ್ಲದೇ ಪಂಚಲಿಂಗೇಶ್ವರ ದೇವಾಲಯದ ಅಭಿವೃದ್ದಿ 3 ವರ್ಷಗಳಲ್ಲಿ 5 ಕೋಟಿ ರೂ.ವೆಚ್ಚ ಮಾಡಿ, ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಲಾಗು ವುದು ಎಂದರು.
ಮೈಸೂರು ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಮುಖ್ಯ ಭಾಷಣ ಮಾಡಿದರು. ಮೈಷುಗರ್ ಎಂ.ಡಿ. ಮಂಗಲ್ ದಾಸ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಗುರುಪ್ರಸಾದ್ ಕೆರಗೋಡು, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ ಕುಮಾರ್, ಮುಖಂಡರಾದ ಮುದ್ದನಘಟ ಮಹಾಲಿಂಗೇಗೌಡ, ಮಂಡ್ಯ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ನಾಗೇಶ್, ಕೆಎಸ್ಆರ್ಟಿಸಿ ವಿಭಾಗಿಯ ನಿಯಂತ್ರಣ ಅಧಿಕಾರಿ ಎಸ್. ಪಿ.ನಾಗರಾಜು, ಮದನ್, ಪ್ರಸನ್ನ ಕುಮಾರ್, ವಸಂತರಾಜು, ಗ್ರಾಮಪಂಚಾಯಿತಿ ಅಧ್ಯಕ್ಷ ನವೀನ್, ಸದಸ್ಯರಾದ ಶಾಂತಗಿರಿ, ಲಿಂಗದೇವರು, ಸುಹಾಸಿನಿ, ದಿವಾಕರ್ ಇತರರು ಉಪಸ್ಥಿತ ರಿದ್ದರು. ಪತ್ರಕರ್ತ ಸೋಮಶೇಖರ್ ಕೆರಗೋಡು ಸ್ವಾಗತಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕೆರಗೋಡು ಗ್ರಾಮದ ಪ್ರಮುಖ ಬೀದಿಯಲ್ಲಿ ಭೀಮೋತ್ಸವದ ಮೆರವಣಿಗೆ ನಡೆಯಿತು. ಮೈಸೂರಿನ ಜಯಶಂಕರ್ ಮೇಸ್ತ್ರಿ ಮತ್ತು ಪದ್ಮಪಾಣಿ ಲಲಿತ ಕಲಾ ಅಕಾಡೆಮಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಭಾರತೀಯರ ಮಾನವೀಯ ಗ್ರಂಥ ಸಂವಿಧಾನದಿಂದ ಸಮಾನತೆಯ ಬದುಕು : ಜಿಲ್ಲಾಧಿಕಾರಿ ಡಾ.ಕುಮಾರ
Recent Comments
Hello world!
on