ಮಂಡ್ಯ :- ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜಸಾಗರದ ಕೆಳ ಸೇತುವೆಯಲ್ಲಿ ಸಂಚರಿಸುವ ವಾಹನಗಳಿಂದ ಸಂಗ್ರಹಿಸುತ್ತಿರುವ ಸುಂಕ ವಸೂಲಾತಿ ಸ್ಥಗಿತ ಮಾಡುವಂತೆ ಒತ್ತಾಯಿಸಿ ಭೂಮಿತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಕಾವೇರಿ ನೀರಾವರಿ ನಿಗಮ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿ ಕೃಷ್ಣರಾಜಸಾಗರ ಬೃಂದಾವನಕ್ಕೆ ಹೋಗುವ ಮಾರ್ಗದಲ್ಲಿರುವ ಕೆಳಸೇತುವೆ ಮೂಲಕ ಹಾದು ಹೋಗುವ ವಾಹನಗಳಿಂದ ಕಾವೇರಿ ನೀರಾವರಿ ನಿಗಮ ವಸೂಲಿ ಮಾಡುತ್ತಿರುವ ಟೋಲ್ ಶುಲ್ಕ ರದ್ದು ಪಡಿಸುವಂತೆ ಒತ್ತಾಯಿಸಿದರು.
ಭೂಮಿ ತಾಯಿ ಹೋರಾಟ ಸಮಿತಿ ಮುಖಂಡ ಕೆ.ಎಸ್. ನಂಜುಂಡೇಗೌಡ ಮಾತನಾಡಿ ಜಲಾಶಯದ ಬೃಂದಾವನ ರಸ್ತೆಯಲ್ಲಿ ನಿರ್ಮಿಸಿರುವ ಕೆಳಸೇತುವೆಗೆ ನಿರ್ಮಾಣಕ್ಕೆ ಆಗಿರುವ ವೆಚ್ಚ ಮತ್ತು ಸೇತುವೆಯು ಸಾರ್ವಜನಿಕರಿಗೆ ಮುಕ್ತವಾಗಿದ್ದಾಗಿನಿಂದ ಇಲ್ಲಿಯ ತನಕ ವಸೂಲಿ ಮಾಡಿರುವ ಟೋಲ್ ಶುಲ್ಕದ ಮಾಹಿತಿ ಕೋರಿದ್ದು ಇದಕ್ಕೆ ಮಾಹಿತಿ ಹಕ್ಕು ಅಧಿಕಾರಿಗಳು ಸೂಚಿಸಿದಂತೆ ಹಣ ಸಂದಾಯ ಮಾಡಿದ್ದರೂ ಕೂಡ ಮಾಹಿತಿಯನ್ನು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸೇತುವೆ ನಿರ್ಮಾಣ ಮಾಡಿ ವರ್ಷ ಕಳೆದರೂ ಕೂಡ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರ ಬಳಿ ಇನ್ನು ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದು ಸರಿಯಲ್ಲ, ಈ ಕೂಡಲೇ ಸುಂಕ ವಸೂಲಾತಿ ಸ್ಥಗಿತ ಮಾಡಬೇಕು ಎಂದು ಒತ್ತಾಯಿಸಿದರು.
ಬೃಂದಾವನದಲ್ಲಿ ಪಾದಚಾರಿ ಮಾರ್ಗ, ನೀರಿನ ಕಾರಂಜಿಗಳು, ದೀಪಗಳು ಮುರಿದು ಬಿದ್ದಿದ್ದರೂ ಇನ್ನೂ ದುರಸ್ಥಿ ಮಾಡಿಲ್ಲ, ವಾರಕೊಮ್ಮೆ ಸಂಗೀತ ಕಾರಂಜಿ ಹದಗೆಡುತ್ತಿದ್ದು ಪ್ರವಾಸಿಗರಿಂದ ಪ್ರವೇಶ ಶುಲ್ಕ 100 ರೂ ಸಂಗ್ರಹ ಮಾಡುತ್ತಿದ್ದರೂ ಇದುವರೆಗೂ ಏಕೆ ದುರಸ್ತಿ ಪಡಿಸಿಲ್ಲ ಎಂದು ಪ್ರಶ್ನಿಸಿದರು.
ರೈತ ಮುಖಂಡರಾದ ಹನಿಯಾಂಬಾಡಿ ನಾಗರಾಜು, ಸಿದ್ದಪ್ಪ, ತಿಮ್ಮೇಗೌಡ, ಭೂಮಿತಾಯಿ ಹೊರಟ ಸಮಿತಿಯ ಅಧ್ಯಕ್ಷ ಬಿ.ಸಿ. ಕೃಷ್ಣೆಗೌಡ, ಕಾರ್ಯದರ್ಶಿ ಎಂ ವಿ ಕೃಷ್ಣ, ಖಜಾಂಚಿ ಮಾದೇವು, ದರ್ಶನ್, ಮಹೇಶ್, ಪರಮೇಶ್, ಜಗದೀಶ್, ಸುರೇಶ್, ರಮೇಶ್ ನೇತೃತ್ವ ವಹಿಸಿದ್ದರು.
ಕೆಆರ್ಎಸ್ ಕೆಳ ಸೇತುವೆ ಸುಂಕ ವಸೂಲಾತಿ ಸ್ಥಗಿತಕ್ಕೆ ಆಗ್ರಹಿಸಿ ಪ್ರತಿಭಟನೆ
Recent Comments
on Hello world!
