Monday, November 17, 2025
Homeಅಪರಾಧಮನೆಗೆ ನುಗ್ಗಿ ಆಭರಣ ದೋಚುತಿದ್ದ ಕಳ್ಳನ ಬಂಧನ

ಮನೆಗೆ ನುಗ್ಗಿ ಆಭರಣ ದೋಚುತಿದ್ದ ಕಳ್ಳನ ಬಂಧನ

ಮಂಡ್ಯ :-  ಮನೆಯಲ್ಲಿ ಯಾರು ಇಲ್ಲದಿದ್ದಾಗ ಹೊಂಚು ಹಾಕಿ ರಾತ್ರಿ ವೇಳೆ ಬಾಗಿಲು ಮುರಿದು ಒಳ ನುಗ್ಗಿ ಆಭರಣಗಳನ್ನು ದೋಚುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು ಮಂಡ್ಯ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ಮನೆಗೆ ನುಗ್ಗಿ ಚಿನ್ನ ಮತ್ತು ಬೆಳ್ಳಿಯ ಆಭರಣ ದೋಚುತಿದ್ದ ಕಳ್ಳನನ್ನ ಮದ್ದೂರು ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು
ರಾಮನಗರ ಜಿಲ್ಲೆ, ಕನಕಪುರ ತಾಲೂಕು ಮೇಳೆ ಕೋಟೆ ಗ್ರಾಮದ ಹಾಲಿ ನೆಲಮಂಗಲ ತಾಲೂಕು ಆಲೂರು ಗ್ರಾಮದಲ್ಲಿ ವಾಸವಿದ್ದ ಹನುಮಂತರಾಜು  ಹೆಚ್ ಆಲಿಯಾಸ್ ಹನುಮಂತ ಬಂಧಿತ ಆರೋಪಿಯಾಗಿದ್ದು,  ಈತನಿಂದ 10 ಲಕ್ಷ ಮೌಲ್ಯದ 142 ಗ್ರಾಂ ಚಿನ್ನ,1 ಲಕ್ಷ ನಾಲ್ಕು ಸಾವಿರ ಮೌಲ್ಯದ 1300 ಗ್ರಾಂ ಬೆಳ್ಳಿ ಒಟ್ಟಾರೆ 11 ಲಕ್ಷದ ನಾಲ್ಕು ಸಾವಿರ ಬೆಲೆಬಾಳುವ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಆರೋಪಿಯು ಮದ್ದೂರು ಸೇರಿದಂತೆ ಮಳವಳ್ಳಿ, ಹಾರೋಹಳ್ಳಿ, ಮಾದನಾಯಕನಹಳ್ಳಿ, ಕನಕಪುರ, ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಕಂಡುಬಂದಿದೆ ಅದೇ ರೀತಿ ಆರೋಪಿಯು ರಾತ್ರಿ ವೇಳೆ ಮನೆಯಲ್ಲಿ ಯಾರು ಇಲ್ಲದೆ, ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿರಿಸಿಕೊಂಡು ಮನೆಯ ಭಾಗಿಲನ್ನು ಆಯುಧದಿಂದ ಮೀಟಿ ತೆಗೆದು ಚಿನ್ನಾಭರಣ ಮತ್ತು ಬೆಳ್ಳಿ ಸಾಮಾನುಗಳನ್ನು ಕಳವು ಮಾಡುವ ಪ್ರವೃತ್ತಿ ಹೊಂದಿದ್ದನು ಎಂಬುದು ತಿಳಿದು ಬಂದಿದೆ ಎಂದರು.
ಮದ್ದೂರು ಪಟ್ಟಣದ ಹೊಳೆ ಬೀದಿಯಲ್ಲಿ ವಾಸವಿದ್ದ ಸಹೋದರರಾದ  ಎಂ.ಆರ್.ಕೆಂಪಶೆಟ್ಟಿ ಮತ್ತು  ರಂಗಸ್ವಾಮಿ 2023 ಡಿಸೆಂಬರ್ 19 ರಂದು  ತಮ್ಮ ಮನೆಗೆ ಬೀಗ ಹಾಕಿ ಮೈಸೂರಿಗೆ ಹೋಗಿದ್ದ ಸಮಯದಲ್ಲಿ 22ರ ಮಧ್ಯರಾತ್ರಿ ಬಾಗಿಲು ಮುರಿದು ಒಳ ನುಗ್ಗಿ ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದೋಚಲಾಗಿತ್ತು, ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದ ಆರೋಪಿಗಳ  ಪತ್ತೆಗಾಗಿ  ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ  .ಸಿ.ವಿ. ತಿಮ್ಮಯ್ಯ . ಎಸ್.ಇ.ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ, ಮಳವಳ್ಳಿ ಪೊಲೀಸ್ ಉಪಾಧೀಕ್ಷಕ .ಕೃಷ್ಣಪ್ಪ ವಿ.  ನೇತೃತ್ವದಲ್ಲಿ ಮದ್ದೂರು ಠಾಣೆಯ ಪೋಲಿಸ್  ಇನ್ ಸ್ಪೆಕ್ಟರ್ .ಶಿವಕುಮಾರ್ ಎಂ.. ಮದ್ದೂರು ಗ್ರಾಮಾಂತರ ವೃತ್ತದ ಪೋಲಿಸ್  ಇನ್ ಸ್ಪೆಕ್ಟರ್ ವೆಂಕಟೇಗೌಡ, ಮದ್ದೂರು ಠಾಣಾ ಪಿ.ಎಸ್.ಐ. ಮಂಜುನಾಥ ಕೆ. ರವಿ , ಮತ್ತು ಸಿಬ್ಬಂದಿಯವರಾದ- ಚಿರಂಜೀವಿ ಪೂಜಾರ್, ಪ್ರಸನ್ನ, ವಿಷ್ಣುವರ್ಧನ, ಓಂಕಾರಪ್ಪ, ಗಿರೀಶ, ರವಿಕಿರಣ್ ಲೋಕೇಶ್, ರಜಿತ್, ಎ ಚಲುವರಾಜು ರವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು.
ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿದ ತಂಡ  ಆರೋಪಿ ಹನುಮಂತರಾಜ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಮದ್ದೂರು ಮತ್ತು ಮದ್ದೂರು ವೃತ್ತದ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂಧಿಯವರ ದಕ್ಷ ಕಾರ್ಯವನ್ನು ಪ್ರಶಂಸಿವುದಾಗಿ ತಿಳಿಸಿದರು.

100ಮೊಬೈಲ್ ಪತ್ತೆ
ಅದೇ ರೀತಿ ಮಂಡ್ಯ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರ ಕಾರ್ಯಾಚರಣೆಯಲ್ಲಿ ಜಿಲ್ಲೆಯಲ್ಲಿ  ಕಳ್ಳತನ ಹಾಗೂ ಕಾಣೆಯಾಗಿದ್ದ ನೂರು  ವಿವಿಧ ಮಾದರಿಯ ಮೊಬೈಲ್ ಪೋನ್ ಗಳನ್ನು ಸಿ.ಇ.ಐ.ಆರ್ ಪೋರ್ಟಲ್ ಮುಖಾಂತರ ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ
ಕಳೆದ ಮೂರು ತಿಂಗಳ ಅವಧಿಯಲ್ಲಿ ಸುಮಾರು ಹದಿನೆಂಟು ಲಕ್ಷ ರೂ ಬೆಲೆ ಬಾಳುವ ವಿವಿಧ ಮಾದರಿಯ 100 ಮೊಬೈಲ್ ಫೋನ್‌ ಗಳನ್ನ ಕಳೆದುಕೊಂಡಿರುವ ಬಗ್ಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು ಇದೀಗ ತಂತ್ರಾಂಶದ ಸಹಾಯದಿಂದ ವಶಪಡಿಸಿಕೊಂಡಿದ್ದು, ಮೊಬೈಲ್ ಪೋನ್‌ಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ಹಿಂದಿರುಗಿಸಲಾಗಿದೆ ಎಂದು ಮಾಹಿತಿ ನೀಡಿದರು
ಸಾರ್ವಜನಿಕರು ಒಂದು ವೇಳೆ  ಮೊಬೈಲ್ ಕಳೆದು ಕೊಂಡಲ್ಲಿ ಮೊಬೈಲ್‌ಗೆ ಸಂಬಂಧ ಪಟ್ಟ ದಾಖಲಾತಿ, ಪೊಲೀಸ್ ದೂರಿನ e-lost  ಪ್ರತಿ ಪಡೆದು www.ceir.gov.in ನಲ್ಲಿ ಲಾಗಿನ್ ಆಗಿ ದಾಖಲಿಸ ಬಹುದಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments