ಮಂಡ್ಯ :- ಕನ್ನಡ ನಾಡು,ನುಡಿ,ಜಲ ಹಾಗೂ ಚಿತ್ರರಂಗದ ಉಳಿವಿನ ಹಿತ ದೃಷ್ಟಿಯಿಂದ ಹೇಳಿಕೆ ನೀಡಿದ್ದ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಕನ್ನಡ ವಿರೋಧಿ ಸಂಘಟನೆಗಳನ್ನು ಎತ್ತಿ ಕಟ್ಟಿ ತೇಜೋ ವಧೆಗೆ ಮುಂದಾಗಿ ಕಾನೂನು ಸುವ್ಯವಸ್ಥೆ ಹದಗೆಡಿಸಿ ಶಾಂತಿ ಭಂಗಕ್ಕೆ ಮುಂದಾಗಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ವಿರುದ್ಧ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿರನ್ನು ಭೇಟಿಯಾದ ವಿವಿಧ ಸಂಘಟನೆಯ ಮುಖಂಡರು ದೂರು ಸಲ್ಲಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಗಣಿಗ ಚಲನ ಚಿತ್ರೋತ್ಸವದಲ್ಲಿ ಚಿತ್ರರಂಗದ ಎಲ್ಲರೂ ಭಾಗಿಯಾಗಬೇಕು ಅದೇ ರೀತಿ ಕನ್ನಡ ನಾಡು ನುಡಿ ಜಲ ವಿಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಹಲವರು ವಿಫಲರಾಗಿದ್ದಾರೆಂದು ಹೇಳಿಕೆ ನೀಡಿದ್ದರು, ಇದಕ್ಕೆ ಚಲನಚಿತ್ರ ನಿರ್ದೇಶಕ ಚಂದ್ರಚೂಡ್ ಆಕ್ಷೇಪ ವ್ಯಕ್ತಪಡಿಸಿ ಶಾಸಕರ ವಿರುದ್ಧ ಫೇರಾವ್ ಮಾಡುವ ಬೆದರಿಕೆ ಯೊಡ್ಡಿದ್ದರು ಆದರೆ ಶಾಸಕರು ಪ್ರತಿಕ್ರಿಯೆ ನೀಡಿದ ಮೌನ ವಹಿಸಿದ್ದರು.
ಇಂತಹ ಸಂದರ್ಭದಲ್ಲಿ ಕೊಡಗಿನ ಸಿಎನ್ಸಿ ಸಂಘಟನೆಯ ಅಧ್ಯಕ್ಷ ಎನ್ ಯು ನಾಚಪ್ಪ ಶಾಸಕರನ್ನು ತೇಜೋವಧೆ ಮಾಡುವ ದೃಷ್ಟಿಯಿಂದ ಚಿತ್ರನಟಿ ರಶ್ಮಿಕಾ ಮಂದಣ್ಣ ಹೆಸರು ಮುಂದಿಟ್ಟುಕೊಂಡು ಹಾಗೂ ಕನ್ನಡ ವಿರೋಧಿ ಸಂಘಟನೆಗಳನ್ನು ಎತ್ತಿಕಟ್ಟಿ ಶಾಸಕರ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವುದು ಸರಿಯಲ್ಲ.
ಕರ್ನಾಟಕ ರಾಜ್ಯದ ಏಕೀಕರಣ ವ್ಯವಸ್ಥೆಗೆ ಮಾರಕವಾದಂತಹ ಕೊಡಗು ಪ್ರತ್ಯೇಕ ರಾಜ್ಯ ಹೋರಾಟದ ನೇತೃತ್ವ ವಹಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷರು ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು ಆ ಹಿನ್ನೆಲೆಯಲ್ಲಿ ಎನ್ ಯು ನ್ಯಾಚಪ್ಪ ಹಾಗೂ ಚಿತ್ರನಟಿ ರಶ್ಮಿಕಾ ಮಂದಣ್ಣ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಮುಖಂಡರಾದ ಬೇಲೂರು ಸೋಮಶೇಖರ್, ಕಾಗೆ ಹಳ್ಳದ ದೊಡ್ಡಿ ರಾಮಕೃಷ್ಣ, ಎಚ್ ಡಿ ಜಯರಾಮ್, ಕೆ ಆರ್ ರವೀಂದ್ರ, ಉಮ್ಮಡಹಳ್ಳಿ ನಾಗೇಶ್, ಮಹೇಶ್ ನೇತೃತ್ವ ವಹಿಸಿದ್ದರು.