ನಾಗಮಂಗಲ :- ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಕಾರಿನ ಹಿಂಬದಿಯ ಗ್ಲಾಸ್ ಒಡೆದು ಚಿನ್ನಾಭರಣ ದೋಚಿದ್ದ ಕಳ್ಳನನ್ನು ಬೆಳ್ಳೂರು ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆಯ ಹಳೆಪೇಟೆ ನಿವಾಸಿ ನಾಗರಾಜಪ್ಪರ ಮಗ ವೀರೇಶ್ ಬಂದಿತ ಕಳ್ಳನಾಗಿದ್ದು ಈತನಿಂದ 8 ಲಕ್ಷ ಮೌಲ್ಯದ 51 ಗ್ರಾಂ ಚಿನ್ನಾಭರಣ ಹಾಗೂ ಪ್ಯಾಸೆಂಜರ್ ಆಟೋವನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರಿನ ನಿವಾಸಿ ಹನೀಫ್ ಕಳೆದ ಅ. 18 ರಂದು ಬೆಳ್ತಂಗಡಿಗೆ ಹೋಗುತ್ತಿದ್ದಾಗ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಗಳೂರು-ಮಂಗಳೂರು ಹೆದ್ದಾರಿ ಬದಿಯ ಎಂಟಿಆರ್ ಹೋಟೆಲ್ ಬಳಿ ಕಾರು ನಿಲ್ಲಿಸಿ ತಿಂಡಿ ತಿನ್ನಲು ಹೋಗಿದ್ದರು, ವಾಪಸ್ ಬಂದಾಗ ಕಾರು ಹೊತ್ತಿ ಉರಿಯುವುದನ್ನು ಕಂಡರು ಆದರೆ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿತ್ತು.
ಈ ಬಗ್ಗೆ ಹನೀಪ್ ಬೆಳ್ಳೂರು ಠಾಣೆಗೆ ದೂರು ದಾಖಲಿಸಿ ಕಾರಿನಲ್ಲಿ ಚಿನ್ನಾಭರಣದ ಬ್ಯಾಗ್ ಇದ್ದ ಬಗ್ಗೆ ಮಾಹಿತಿ ನೀಡಿದ್ದರು, ಪ್ರಕರಣ ಭೇದಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು, ಆರೋಪಿಗಳ ಶೋಧ ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸ್ ತಂಡಕ್ಕೆ ದೊರೆತ ಖಚಿತ ಮಾಹಿತಿ ಮೇರೆಗೆ ಬೆಳ್ಳೂರು ಕ್ರಾಸ್ ಬಳಿ ಆರೋಪಿ ವೀರೇಶ್ ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ,ಹೋಟೆಲ್ ಮುಂದೆ ನಿಲ್ಲಿಸಿದ್ದ ಕಾರಿನ ಹಿಂಬದಿಯ ಗ್ಲಾಸ್ ಹೊಡೆದು ಅಲ್ಲಿದ್ದ ಚಿನ್ನಾಭರಣದ ಬ್ಯಾಗನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಆದರೆ ಕಳ್ಳತನದ ಸಮಯದಲ್ಲಿ ಕಾರಿಗೆ ಬೆಂಕಿ ಹೊತ್ತಿ ಕೊಂಡಿರಲಿಲ್ಲ ಎಂದು ಮಾಹಿತಿ ನೀಡಿದ್ದು ತಾಂತ್ರಿಕ ಕಾರಣದಿಂದ ಕಾರು ಬೆಂಕಿಯ ಕೆನ್ನಾಲೆಗೆ ಸುಟ್ಟು ಹೋಗಿದೆ.
ಕಳವು ಮಾಡಿದ್ದ 51 ಗ್ರಾಂ ಚಿನ್ನಾಭರಣ ಮತ್ತು ಕಳ್ಳತನಕ್ಕೆ ಬಳಸಿದ್ದ ಪ್ಯಾಸೆಂಜರ್ ಆಟೋವನ್ನು ಪೊಲೀಸರು ವಶಕ್ಕೆ ಪಡೆದಿದ್ದು,ಪ್ರಕರಣದ ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕ ತಿಮ್ಮಯ್ಯ,ಗಂಗಾಧರಸ್ವಾಮಿ ಎಸ್.ಸಿ. . ನಾಗಮಂಗಲ ಉಪ ವಿಭಾಗದ ಅರಕ್ಷಕ ಉಪ-ಅಧೀಕ್ಷಕ ಚೆಲುವರಾಜು ಬಿ, ವೃತ್ತ ನಿರೀಕ್ಷಕ ಹೇಮಂತ್ ಕುಮಾರ್, ಪೋಲಿಸ್ ಸಬ್ ಇನ್ ಸ್ಪೆಕ್ಟರ್ ರವಿಕುಮಾರ್ ವೈ.ಎನ್ ಪೇದೆಗಳಾದ ಪ್ರಶಾಂತ್ ಕುಮಾರ್, ಮಧುಕುಮಾರ, ಮಹದೇವಸ್ವಾಮಿ, ರವಿಕಿರಣ್, ಲೋಕೇಶ್ ಸಿ.ಪಿ.ಸಿ ಪ್ರಕಾಶ್ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡದ ಸೇವೆ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾರಿನಲ್ಲಿದ್ದ ಚಿನ್ನಾಭರಣ ದೋಚಿದ್ದ ಕಳ್ಳನ ಬಂಧನ
Recent Comments
on Hello world!
